(ಮೇ, ೨೩, ೧೯೧೯-ಜುಲೈ, ೨೯, ೨೦೦೯) ಚೆಲುವೆ ಗಾಯಿತ್ರಿದೇವಿಯವರು, ೧೯೩೯ರಿಂದ ೧೯೭೦ರವರೆಗೆ ಜೈಪುರದ ಮಹಾರಾಣಿಯಾಗಿದ್ದವರು. ೧೯೩೯ ರಲ್ಲಿ, ಜೈಪುರದ ಮಹಾರಾಜ ೨ನೆಯ ಸವಾಯ್ ಮಾನ್ ಸಿಂಗ್ ಅವರನ್ನು ಮದುವೆಯಾದ ಗಾಯತ್ರಿ ದೇವಿಯವರು, ವಿಶ್ವದ ಸುಪ್ರಸಿದ್ಧ ಫ್ಯಾಶನ್ ಪತ್ರಿಕೆಯೊಂದಾದ, ವೋಗ್ ನಲ್ಲಿ ವಿಶ್ವದ ೧೦ ಅತಿ-ಸುಂದರ ಸ್ತ್ರೀಯರಲ್ಲಿ ಒಬ್ಬರೆಂಬ ವರದಿಗೆ ಅನ್ವರ್ಥನಾಮರು. ಒಮ್ಮೆ ಅವರನ್ನು ಕಂಡವರು ಮತ್ತೊಮ್ಮೆ ಅವರನ್ನು ನೋಡಲು ಹಾತೊರೆಯುತ್ತಿದ್ದ ಮುಗ್ಧ ಮನಮೋಹಕ ಸೌಂದರ್ಯದ ಗಣಿಯಾಗಿದ್ದರು. ಶಿಫಾನ್ ಸೀರೆಯಲ್ಲಿ ಮಿಂಚುವ ಅಸಾಧಾರಣ ಸೌಂದರ್ಯ ಅವರದು. ಅತ್ಯಂತ ಆಕರ್ಷಕ ವ್ಯಕ್ತಿತ್ವದ ನಗುಮುಖದ ನಯವಾದ ಮಾತಿನ ಬೆಡಗಿಯೆಂಬ ಹೆಗ್ಗಳಿಕೆಯನ್ನು ಗಾಯಿತ್ರಿ ದೇವಿಯವರು ಬಹಳಕಾಲ ಉಳಿಸಿಕೊಂಡಿದ್ದರು. ತಮ್ಮ ೮೦ ರ ವಯಸ್ಸಿನಲ್ಲೂ, ಮಾಡೆಲಿಂಗ್ ಮಾಡಿದ ಖ್ಯಾತಿ ಅವರದು. ಅವರ ಬಗ್ಗೆ ಹೇಳುತ್ತಾ ಹೋದರೆ, ಎಲ್ಲವೂ ಅಬ್ಬಾಯೆನ್ನಿಸುವಂತಹ ವಿಚಾರಗಳೇ. ೨೧ ರ ಹರೆಯದಲ್ಲೇ ಸ್ವಂತ-ವಿಮಾನ ಖರೀದಿಸಿದಾಕೆ, ಅರಮನೆಯ ಸಂಪ್ರದಾಯಗಳಿಗೆ ಧಿಕ್ಕಾರ ಹೇಳಿದ ಧರ್ಯಸ್ಥೆ. ಶಾಪಿಂಗ್ ಗೆಂದೇ ವಿದೇಶಗಳಲ್ಲಿ ತಿರುಗಾಡಿ ಬಂದವಳು, ಇತ್ಯಾದಿ, ಇತ್ಯಾದಿ. ರಾಜರಿಗೆ ಐಷಾರಾಮಿ ವಸ್ತುಗಳೆಲ್ಲಾ ತಮ್ಮದಾಗಿಸುವ ಆಸೆ, ಹಾಗೂ ಪ್ರತಿಷ್ಠಿಯ ಸಂಕೇತ. ವಿದೇಶಗಳಿಂದ ಅತ್ಯಾಧುನಿಕ ಕಾರ್ ಗಳನ್ನು ತರಿಸಿಕೊಂಡು ಅದರಲ್ಲಿ ಓಡಾಡುವ ಖಯಾಲಿಯನ್ನು ಹೊಂದಿದ್ದರು. ೭೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ ಗಳಿದ್ದವು. ರೋಲ್ಸ್ ರಾಯ್ಸ್, ಬೆಂಟ್ಲಿಸ್, ಜಾಗ್ವಾರ್, ಇತ್ಯಾದಿ ಕಾರ್ ಗಳನ್ನು ತಾವೇ ಚಲಾಯಿಸಿ ನೋಡುವ ಷೋಕಿ ಅವರಿಗಿತ್ತು. == ಅಂದಿನ ಎಲ್ಲಾ ರಾಜಮನೆತನದವರಂತೆ, ಗಾಯಿತ್ರಿದೇವಿಯವರಿಗೂ ಬೇಟೆಯ ಹುಚ್ಚಿತ್ತು == ಅವರೇ ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿರುವಂತೆ, ಅವರು ಬೇಟೆಯಾಡಿದ ಹುಲಿಗಳ ಸಂಖ್ಯೆ ೨೭. ವಿದೇಶಗಳಲ್ಲಿ ತಿರುಗಾಡುವಾಗ, ಅಥವಾ ಬೇಟೆಯಾಡುವಾಗ ಮಾತ್ರ ಅವರು, ಆಧುನಿಕ ಉಡುಪನ್ನು ಧರಿಸುತ್ತಿದ್ದರು. ಪತಿಯೊಡನೆ ಜೈಪುರದ ಅರಮನೆಗೆ ಪಾದಾರ್ಪಣೆಮಾಡಿದಾಗ, ಮುಖಕ್ಕೆ ಪರ್ದಾ ಹಾಕಿಕೊಂಡಿದ್ದರೂ ಕ್ರಮೇಣ ತಮ್ಮ ಪ್ರಿಯಕರನ ಮನಸ್ಸನ್ನು ಗೆದ್ದು, ಪರದೆ ಪದ್ಧತಿಯನ್ನು ಹಿಂದೆ ಸರಿಸಿ, ರಾಜಮನೆತನದ ಬಹಳ ಹಿಂದಿನಿಂದ ಬಂದಿದ್ದ ಒಂದು ಸಂಪ್ರದಾಯವನ್ನು ಮುರಿದ ಧೈರಸ್ಥೆ ಅವರು. ರಾಜಕೀಯದಲ್ಲೂ ಅತಿ ಹೆಸರುಮಾಡಿದ್ದ ರಾಜಮಾತೆಯವರು, ಭಾರತದ ಮಾಜೀಗವರ್ನರ್ ಜನರಲ್ ರಾಜಗೋಪಾಲಾಚಾರಿಯವರ ಜೊತೆಗೂಡಿ ಹುಟ್ಟುಹಾಕಿದ ಸ್ವತಂತ್ರಪಾರ್ಟಿ ಯ ಅಭ್ಯರ್ಥಿಯಾಗಿ ನಿಂತು, ೧೯೬೨, ಹಾಗೂ ೧೯೭೧ ರ ಚುನಾವಣೆಯಲ್ಲಿ ಪ್ರಚಂಡ ಮತಗಳಿಸಿ ಗೆದ್ದುಬಂದಿದ್ದರು. ಇದಲ್ಲದೆ ೩ನೇ ಹಾಗೂ ೪ನೇ ಲೋಕಸಭೆಯಲ್ಲಿ ಸದಸ್ಯೆಯಾಗಿದ್ದರು. ೧೯೬೨ ರಲ್ಲಿ, ಕಾಂಗ್ರೆಸ್ ಪಕ್ಷ ದ ವಿರೋಧಿಯಾಗಿ, ಸಕ್ರಿಯ ರಾಜಕೀಯರಂಗಕ್ಕೆ ಪ್ರವೇಶಿಸಿದ್ದರು. ತುರ್ತು ಪರಿಸ್ಥಿತಿ ಯ ಸಮಯದಲ್ಲಿ, ತಿಹಾರ್ ಜೈಲ್ ನಲ್ಲಿ ೫ ತಿಂಗಳು ಕಳೆದರೂ ಅವರಿಗಿದ್ದ ವಸತಿ ಸೌಲಭ್ಯ ಯಾವ ಕೈದಿಗೂ ಒಂದು ಕನಸೆಂದೇ ಹೇಳಬೇಕು. ಪ್ರತ್ಯೇಕ ಮಲಗುವ ಕೊಠಡಿ, ಪ್ರತ್ಯೇಕ ಶೌಚಾಲಯ, ವರಾಂಡಾ ದಲ್ಲೇ ಕಳೆದ ಬಗ್ಗೆ ಗಾಯಿತ್ರಿದೇವಿಯವರು ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. == ಜನನ ಮತ್ತು ಬಾಲ್ಯ == ಮೇ ೨೩, ೧೯೧೯ ರಂದು ಜೈಪುರ್, ಬರೋಡ, ಹೈದೆರಾಬಾದ್, ನಷ್ಟು ಹೆಸರುವಾಸಿಯಾಗದಿದ್ದರೂ, ಚಿಕ್ಕ ರಾಜರಾಡಳಿತದ, ಕೂಚ್ ಬಿಹಾರ್ ರಾಜವಂಶದ ಮಹಾರಾಜಾ ಜಿತೇಂದ್ರ ನಾರಾಯಣ್ ಮತ್ತು ಮಹಾರಾಣೀ ಇಂದಿರಾದೇವಿಯವರ ೪ ನೇ ಮಗಳಾಗಿ, ಲಂಡನ್ ನಲ್ಲಿ ಜನಿಸಿ, ಸ್ವಿಸ್ ಜನರ ಪರಿಸರದಲ್ಲಿ ವಾಸವಾಗಿದ್ದರು. ಬಾಲ್ಯದಲ್ಲಿ ಅವರ ಹೆಸರು ಆಯಿಶಾ ಎಂದು. ನಂತರ ಅವರ ಹೆಸರನ್ನು ಬದಲಾಯಿಸಲಾಯಿತು. ಲಂಡನ್ ನಗರದಲ್ಲಿ ಅವರ ಮನೆ, ವಿಶ್ವದ ಸುಪ್ರಸಿದ್ಧ ಡಿಪಾರ್ಟ್ಮೆಂಟ್ ಸ್ಟೋರ್ ಹೆರಾಡ್ಸ್ ಬಳಿ ಇತ್ತು. ಗಾಯಿತ್ರಿದೇವಿಯವರ ವಿದ್ಯಾಭ್ಯಾಸ ಸ್ವಿಟ್‍ಜರ್‍ಲ್ಯಾಂಡ್, ಲಂಡನ್ ಸ್ಕೂಲ್ ಆಫ್ ಸೆಕ್ರಟರೀಸ್, ಶಾಂತಿನಿಕೇತನ್ ಗಳಲ್ಲಿ ನಡೆಯಿತು. == ಸವಾಯ್ ಮಾನ್ ಸಿಂಗ್ ಆಯಿಶಾರನ್ನು ಭೆಟ್ಟಿಯಾದದ್ದು ಲಂಡನ್ ನ ಪೋಲೋ ಕ್ಲಬ್ ವೊಂದರಲ್ಲಿ == ರಾಜಕುಮಾರ ೨ ನೆ ಸವಾಯ್ ಮಾನ್ ಸಿಂಗ್ ರಿಗೆ ಗಾಯಿತ್ರಿದೇವಿಯವರ ಪರಿಚಯವಾದದ್ದು ಲಂಡನ್ ನಲ್ಲಿ ಪೋಲೋ ಕ್ಲಬ್ ನಲ್ಲಿ ಆಟವಾಡುವ ಸಮಯದಲ್ಲಿ. ಇದರ ತರುವಾಯ ಅವರ ಪ್ರೇಮ ಪ್ರಕರಣ ಸುಮಾರು ೬ ವರ್ಷಗಳ ಕಾಲ ನಡೆಯಿತು. ಸವಾಯ್ ಮಾನ್ ಸಿಂಗ್ ರಿಗೆ ಆಗಲೇ ಇಬ್ಬರು ಹೆಂಡತಿಯರಿದ್ದರು ಎಂಬ ವಿಷಯ ತಿಳಿದಾಗ್ಯೂ ಗಾಯಿತ್ರಿದೇವಿಯವರು ಅವರಲ್ಲಿ ಆಕರ್ಷಿತರಾದರು. ಮಾನ್ ಸಿಂಗ್ ರಿಗೆ ೩ ನೇ ಹೆಂಡತಿಯಾಗಲು ಅವರು ಸಮ್ಮತಿ ಸೂಚಿಸಿದರು. ೧೯೩೯ ರಲ್ಲಿ ಅವರ ವಿವಾಹವಾಯಿತು. ಕುದುರೆ ಸವಾರಿ, ಕಾರ್ ಡ್ರೈವಿಂಗ್, ಪೋಲೋ, ಹಂಟಿಂಗ್, ಶಾಪಿಂಗ್, ಹಾಗೂ ಜನಹಿತ ಕಾರ್ಯಗಳಲ್ಲಿ ತಮ್ಮ ಮುಂದಿನ ಜೀವನವನ್ನು ಅರಿಸಿಕೊಂಡರು. ೯ ಮೇ, ೧೯೪೯ ರಲ್ಲಿ, ಅವರ ಚೊಚ್ಚಲು ಮಗ, ಜಗತ್ ಸಿಂಗ್ ಹುಟ್ಟಿದರು. ೧೯೭೧ ರಲ್ಲಿ ಕೇಂದ್ರ ಸರ್ಕಾರ, ರಾಜರಿಗೆ ಸಿಗುವ ಪ್ರೈವಿ ಪರ್ಸ್, ಹಣ ನಿಲ್ಲಿಸಿದಾಗ, ಕಾನೂನು ಕಡೆಗಣಿಸಿದ್ದರಿಂದ, ಅವರು ತಿಹಾರ್ ಜೈಲ್ ನಲ್ಲಿ ಕಳೆಯಬೇಕಾಯಿತು. == ಜೈಪುರ್ ಅರಮನೆಯಲ್ಲಿ ಅವರಿಗೆ ವಿಶೇಷ ಪ್ರಾಮುಖ್ಯತೆಯಿತ್ತು == ತಾವು ೨೧ ವರ್ಷದವರಾಗಿದ್ದಾಗಲೇ ಅರಮನೆಯಲ್ಲಿ ಖಾಸಗೀ ಏರೋಪ್ಲೇನ್ ಇತ್ತು. ಗಾಯಿತ್ರಿ ದೇವಿಯವರ ಅಜ್ಜಿ, ಹಸಿರು ಸೀರೆಗೆ ಎಮರಾಲ್ಡ್ ಸಜಾಯಿಸಲು ಮನಾಮಾಡಿದರು. ಗುಲಾಬಿಬಣ್ಣದ ಸೀರೆಗಳಿಗೆ ಅವು ಸರಿಹೋಗುತ್ತವೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಎಲ್ಲರಿಗೂ ಅವರ ಆದ್ಯತೆಗಳ ಬಗ್ಗೆ ಆಸ್ತೆಯಿತ್ತು. == ಜೈಪುರ್ ದ ಅವರ ೪ ಅರಮನೆಗಳು == ಲಿಲಿಪೂಲ್, ತಖ್ತೆ ಶಾಹಿ ರಾಮ್ ಬಾಗ್, ಜಯ್ ಮಹಲ್ ಈ ಅರಮನೆಗಳ ಈಗಿನ ಮೌಲ್ಯ, ೧,೩೮೦ ಕೋಟಿಗೂ ಮಿಗಿಲು. ಇದಲ್ಲದೆ ಇಂಗ್ಲೆಂಡ್ ನ, ನೈಟ್ಸ್ ಬ್ರಿಡ್ಜ್ ನಲ್ಲೊಂದು ಬಂಗಲೆ ಇದೆ. ಜೈಪುರದಲ್ಲಿ ಬೇಸಿಗೆಯ ಬಿಸಿಯಿಂದ ಪಾರಾಗಲು, ಗಾಯಿತ್ರಿದೇವಿಯವರು ಸ್ವಲ್ಪ ದಿನ ಇಂಗ್ಲೆಂಡ್ ನಲ್ಲಿ ತಮ್ಮ ನಿವಾಸದಲ್ಲಿ ತಂಗುತ್ತಿದ್ದರು. ಜೈಪುರದ ಅವರ ರಾಮ್ ಬಾಗ್ ಅರಮನೆ, ಹೋಟೆಲ್ ಆಗಿ ಪರಿವರ್ತಿತಗೊಂಡಮೇಲೂ ಗಾಯಿತ್ರಿದೇವಿಯವರು, ಅಲ್ಲಿಗೆ ಆಗಮಿಸಿ, ಗಣ್ಯರನ್ನು ಅತಿಥಿಗಳನ್ನೂ ಆಮಂತ್ರಿಸಿ ಶಾಂಪೇನ್ ಹೀರುವ ಹವ್ಯಾಸವನ್ನು ಬಹಳಕಾಲ ಜೀವಂತವಾಗಿಟ್ಟುಕೊಂಡಿದ್ದರು. ಒಮ್ಮೊಮ್ಮೆ ರಾಮ್ ಬಾಗ್ ನ ಪೋಲೋ ಬಾರ್ ಗೆ ಹೋಗಿ ಶಾಂಪೇನ್ ಹೀರುತ್ತಿದ್ದರಂತೆ. == ವಜ್ರಗಳ ಬಗ್ಗೆ ವಿಶೇಷ ಒಲವು == ವಜ್ರಗಳೆಂದರೆ ಗಾಯಿತ್ರಿದೇವಿಯವರಿಗೆ ಎಲ್ಲಿಲ್ಲದ ಸೆಳೆತ. ತಮ್ಮ ೮೦ ರ ಹರೆಯದಲ್ಲಿ ಏರಿಸಿ ಯ ವಜ್ರಾಭರಣಗಳಿಗೆ ರೂಪದರ್ಶಿಯಾದ ಒಂದು ವಿಶೇಷ ದಾಖಲೆಯನ್ನು ಅವರು ಹೊಂದಿದ್ದಾರೆ. ಡೈಮಂಡ್ ಟ್ರೇಡಿಂಗ್ ಕಂ. () ಸ್ಫಟಿಕದ ಆಕಾರದ ವಜ್ರದ ಮೇಲೆ ಅವರ ಮುಖವನ್ನು ಕೆತ್ತಿ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿತ್ತು. ಗಾಯಿತ್ರಿದೇವಿಯವರು ಬಿಟ್ಟುಹೋಗಿರುವ ಆಭರಣಗಳ ಮೌಲ್ಯ ಸುಮಾರು ೩,೦೦೦ ಕೋಟಿ ರೂಪಾಯಿಗಳಷ್ಟು. ಕತ್ತಿನಲ್ಲಿ ಧರಿಸುವ ಜೈಪುರದ ಪ್ರಸಿದ್ಧ ಮುತ್ತಿನ ಹಾರ, ಉಟ್ಟ ಸೀರೆಗಳಿಗೆ ತಕ್ಕಂತೆ ಹೊಂದಿಕೆಯಾಗುವ, ಆಕರ್ಶಕ ವಿನ್ಯಾಸದ ಆಭರಣಗಳು, ಎಲ್ಲಿಯೂ ಹೆಚ್ಚಾದ ಅಲಂಕಾರ ಎನ್ನಿಸದಷ್ಟು ಸೂಕ್ತ ಎಚ್ಚರಿಕೆ ವಹಿಸಿದ ಅಲಂಕಾರ, ಇವು ಅವರ ಆಸಕ್ತಿಗಳು. == ಆತ್ಮಕಥೆ, ಎ ಪ್ರಿನ್ಸೆಸ್ ರಿಮೆಂಬರ್ಸ್ ಪುಸ್ತಕದಲ್ಲಿನ ಪುಟಗಳಲ್ಲೊಂದು ಪ್ರಸಂಗ == ಗಾಯಿತ್ರಿದೇವಿಯವರು ಕಳೆದ ಐಷಾರಾಮಿನ ಬದುಕಿನ ಒಂದು ಚಿಕ್ಕ ಉದಾಹರಣೆ, ೧೯೭೬ ರಲ್ಲಿ ರಾಜಕೀಯದಿಂದ ನಿವೃತ್ತಿಪಡೆದ ನಂತರ ತಮ್ಮ 'ಎ ಪ್ರಿನ್ಸೆಸ್ ರಿಮೆಂಬರ್ಸ್', ಆತ್ಮಕಥೆಬರೆದ ನಂತರ, ಅದು ಇಂಗ್ಲೆಂಡ್ ನ ಸುಪ್ರಸಿದ್ದ ಪ್ರಕಟನಾಲಯದಲ್ಲಿ ಮುದ್ರಿತವಾಯಿತು. ಆಗ ಪ್ರಕಾಶಕರಿಂದ ಕಾರ್ ಪಡೆದು ಶಾಪಿಂಗ್ ಗೆಂದು, ಹೋದವರು, ಇಂಗ್ಲೆಂಡ್ ನ ಸರ್ರೆ ಎಂಬ ಉಪನಗರದಲ್ಲಿ ಬಂಗಲೆಯೊಂದನ್ನು ಖರೀದಿಸಿದರಂತೆ. ಗಾಯಿತ್ರಿದೇವೀಸ್ ಮೆಮಾಯಿರ್ಸ್ ಪುಸ್ತಕರೂಪದಲ್ಲಿ, ಶಾಂತಾ ರಾಮರಾವ್ ಬರೆದರು. ಸ್ವಾತಂತ್ರ್ಯ ಬಂದನಂತರ, ಜೈರವರು, ರಾಜಪ್ರಮುಖ್ ರಾದರು. ರಾಜಗದ್ದಿ ಹೊರಟುಹೋಯಿತು. ಆದರೂ ಗಾಯಿತ್ರಿ ದೇವಿಯವರು,ರಾಜಾಸ್ಥಾನದ ಗ್ರಾಮೀಣ ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದರು. ಜೈಪುರದಲ್ಲಿ ಬಾಲಕಿಯರ ಶಾಲೆ, ಮಹಾರಾನಿ ಗಾಯಿತ್ರಿದೇವಿ, ಸ್ಕೂಲ್ ಸವಾಯ್ ಮಾನ್ ಸಿಂಗ್ ವಿದ್ಯಾಲಯ್ ಯೊಂದನ್ನು ಸ್ಥಾಪಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಪೋಲೋ, ಗಾಲ್ಫ್ ಆಟದಲ್ಲಿ ಆಸಕ್ತಿವಹಿಸುತ್ತಿದ್ದರು. ಹಳೆಕಾಲದ ಕಾರ್ ಗಳನ್ನು ಸಂಗ್ರಹಿಸುವ ಶೌಕ್ ಕೂಡಾ ಇತ್ತು. ಬಡವರ ಸೇವೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಜೈಪುರದ, ಕರ-ಕುಶಲ ಕೈಗಾರಿಕೆಗೆ ಬಢಾವಕೊಟ್ಟಿದ್ದಲ್ಲದೆ, ಅಂತಾರಾಷ್ಟ್ರೀಯ ವಲಯದಲ್ಲಿ ಅವಕ್ಕೆ ಮಾರುಕಟ್ಟೆಯನ್ನೂ ಕಲ್ಪಿಸಿ ಸಹಾಯಮಾಡಿದರು. ಈ ಎಲ್ಲಾ ಕಾರಣಗಳಿಂದಾಗಿ ರಾಜಾಸ್ಥಾನದ ಪ್ರಜೆಗಳು ಅವರನ್ನು ಗೌರವಿಸುತ್ತಿದ್ದರು. == ಲಂಡನ್ ನಲ್ಲಿ, ೯೦ ನೇ ಹುಟ್ಟುಹಬ್ಬ == ತಮ್ಮ ೯೦ ನೇ ವಯಸ್ಸಿನ ಹುಟ್ಟುಹಬ್ಬವನ್ನು ಲಂಡನ್ ನ ಸಮ್ಮರ್ ಹೋಮ್ ನಲ್ಲಿ ನೆರೆವೇರಿಸಿಕೊಂಡನಂತರ, ಅಲ್ಲಿನ ಕಿಂಗ್ ಎಡ್ವರ್ಡ್ಸ್ ಆಸ್ಪತ್ರೆ ಯಲ್ಲಿ, ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಇದರಲ್ಲಿ ಹೆಚ್ಚಿನ ಪ್ರಗತಿ ಕಾಣಿಸಲಿಲ್ಲ. ತಾಯ್ನಾಡಿಗೆ ಬಾರುವ ಆಶೆಯಾಯಿತು. ೯೦ ವರ್ಷದ ಸೊಬಗಿನ ಸುಂದರಿ, ಗಾಯಿತ್ರಿ ದೇವಿಯವರು, ಕೆಲಕಾಲದಿಂದ ರೋಗಗ್ರಸ್ತರಾಗಿದ್ದರು. ದೇವ್ ರಾಜ್ ಸಿಂಗ್ ಮೊಮ್ಮಗ, ಅವರ ಬಳಿಯೇಇದ್ದರು. ಈಗಿನ ರಾಜ, ಭವಾನಿ ಸಿಂಗ್, ಸಹಿತ .೨೦೦೯ ರ, ಜುಲೈತಿಂಗಳ ಮೊದಲಲ್ಲಿ ಸಂಕೋಬೇನ್ ಮರ್ಲಭ ಸ್ಮಾರಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಗ್ಯಾಸ್ಟ್ರೊ ಸಮಸ್ಯೆ ಇಂದ ಸ್ವಲ್ಪ ಚೇತರಿಸಿಕೊಂಡ ಕಾರಣ ಮನೆಗೆ ಕಳಿಸಲಾಗಿತ್ತು. ಆದರೆ, ಮತ್ತೆ ಎದೆಯಲ್ಲಿ ರಕ್ತ ಸಂಚಯ ಉಂಟಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಯಿತು. ೨೮ ರಂದು ಉಸಿರಾಡಲು ತೊಂದರೆಯಾಯಿತು. ರಾಜಮಾತೆಯವರ ಗೃಹ-ವೈದ್ಯ, ಡಾ. ಎಸ್. ಸಿ. ಕಾಲಾರವರ ಪ್ರಕಾರ, ೨೯ ರಂದು ಬೆಳಿಗ್ಯೆ, ೧೦-೩೦ ಕ್ಕೆ, ರಾಜಮಾತೆಯವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಯಿತು. ಅದೇ ದಿನದ ಸಾಯಂಕಾಲ ೪ ಗಂಟೆಗೆ, ಅವರು ಕೊನೆಯುಸಿರೆಳೆದರು. ರಾಜಮಾತೆ ಗಾಯಿತ್ರಿದೇವಿಯವರು, ತಮ್ಮ ಅನುಪಮ ಸೌಂದರ್ಯ, ಲಾವಣ್ಯ, ಗತ್ತು ಹಾಗೂ ಗಾಂಭೀರ್ಯಕ್ಕೊಂದು ಹೊಸ ಭಾಷ್ಯವನ್ನು ಬರೆದರು. ಮರಣದ ನಂತರವೂ ಸುದ್ದಿಯಲ್ಲಿರುವುದು ಅವರ ವಿಶೇಷಗಳಲ್ಲೊಂದು.